
8 Jul 2024
ಚಿತ್ರದುರ್ಗ, ಜು. 8 : ವಿಭಿನ್ನ ಆಲೋಚನೆಗಳನ್ನು ಹೊಂದಿ ಸಾಮಾನ್ಯ ಮನುಷ್ಯರ ಜೀವನ ಕ್ರಮಕ್ಕಿಂತ
ಬೇರೆಯದೆ ಆದ ಸಮಾಜ ಸುಧಾರಣೆಗೆ ಆದ್ಯತೆ ನೀಡುವಂತಹವರು ಶರಣರು, ಮಹಾಂತರು,
ಶಿವಯೋಗಿಗಳೆನಿಸಿಕೊಳ್ಳತ್ತಾರೆ. ಅಂಥವರ ಸಾಲಿಗೆ ಅಥಣಿ ಮುರುಘಂದ್ರ ಶಿವಯೋಗಿಗಳು ಸೇರುತ್ತಾರೆ
ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ
ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀಗಳು, ಶ್ರೀಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಅಥಣಿ ಮುರುಘಂದ್ರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿವಯೋಗಿಗಳವರ ಬದುಕು ಬಸವಮಯ ಆಗಿತ್ತು. ಶಿವಯೋಗಿಗಳವರ ಜೀವನ ನೋಡಿದರೆ ಅಲ್ಲಿ ಬಸವತತ್ವದ ಅನುಷ್ಠಾನವೇ ಗೋಚರಿಸುತ್ತಿತ್ತು. ಅಷ್ಟರಮಟ್ಟಿಗೆ ಬಸವಣ್ಣನವರ ವಿಚಾರಧಾರೆಗಳನ್ನು ಅಪ್ಪಿಕೊಂಡಿದ್ದರು ಎಂದರು.
ಸಮತಾವಾದ ಮತ್ತು ಜಾತ್ಯಾತೀತ ನಿಲುವಿನ ವಿಚಾರವಾದಿಯಾಗಿದ್ದ ಶ್ರೀಗಳು ಹರ್ಡೆಕರ್ ಮಂಜಪ್ಪನಂಥವರನ್ನು ಸಾಮೀಪ್ಯಕ್ಕೆ ಕರೆದುಕೊಂಡು ಅವರು ಬಸವತತ್ವ ಪರಿಪಾಲನೆಗೆ ಪ್ರೇರಣೆಯಾದರು ಎಂದು ತಿಳಿಸಿದರು.
ದೂರದೃಷ್ಟಿ, ಚಿಕಿತ್ಸಕತನ ಶಿವಯೋಗಿಗಳಲ್ಲಿತ್ತು. ಭೌತಿಕ ವಿಚಾರಗಳತ್ತ ಗಮನಹರಿಸದೆ ಬೌದ್ಧಿಕ ವಿಚಾರಕ್ಕೆ ಮಹತ್ವ ಕೊಟ್ಟವರು. ದಯೆ, ಮಾನವೀಯತೆ ಅವರ ಮೇರುಗುಣಗಳಾಗಿದ್ದವೆಂದು ಅವರ ಬಹುಮುಖ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಲಾಳನಹಳ್ಳಿಯ ಶರಣೆ ಜಯದೇವಿ ತಾಯಿ ಅವರು, ಬಸವಾದಿ ಶಿವಶರಣರ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದ ಶಿವಯೋಗಿಗಳು ಅದರಂತೆ ನಡೆದು ಮಾದರಿ ಜೀವನವನ್ನು ನಡೆಸಿದರು. ಅವರ ಬದುಕು ತೆರೆದ ಪುಸ್ತಕದಂತೆ ಇತ್ತು ಎಂದು ನುಡಿದರು.
ಶ್ರೀ ಮುರುಘಶ ಸ್ವಾಮಿಗಳು, ಶರಣೆ ಚಿನ್ಮಯಿತಾಯಿ, ಮಾತೆ ಅನ್ನಪೂರ್ಣೇಶ್ವರಿ ತಾಯಿ, ಗುರುಕುಲದ ಸಾಧಕರು, ವಿದ್ಯಾರ್ಥಿಗಳು, ಭಕ್ತಾದಿಗಳು ಭಾಗವಹಿಸಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನಗೀತೆಗಳನ್ನು ಹಾಡಿದರು. ಚಿನ್ಮಯಿ ದೇವರು ಸ್ವಾಗತಿಸಿದರು. ವಿದ್ಯಾರ್ಥಿ ಸುದೀಪ್ ಕಾರ್ಯಕ್ರಮ ನಿರೂಪಿಸಿದರು. ವರುಣ್ ಸಂದೇಶ್ ಶರಣುಸಮರ್ಪಣೆ ಮಾಡಿದರು.



