
6 Jul 2024
ಚಿತ್ರದುರ್ಗ, ಜು.-7 : ಪದವಿ ಪ್ರಬುದ್ಧತೆಯ ಸಂಕೇತ. ಪ್ರಬುದ್ಧತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ವ್ಯಕ್ತಿ ತನ್ನ ಬುದ್ಧಿವಂತಿಕೆಯಿಂದ ಮಾತ್ರ ನಾಯಕನಾಗಲು ಸಾಧ್ಯ. ಆದರೆ ತಾನು ಸಂಪಾದಿಸಿದ ಸಂಪತ್ತಿನಿಂದಲ್ಲ ಎಂದು ಡಾ. ಬಸವಕುಮಾರ ಸ್ವಾಮಿಗಳು ಅಭಿಪ್ರಾಯಿಸಿದರು.
ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ನಡೆದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಾವು ಪದವಿಗೆ ಅರ್ಹರಾಗಿದ್ದೇವೆಯೇ ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ಸಾವಿರಾರು ವಚನಗಳನ್ನು ರಚಿಸಿದ ಬಸವಣ್ಣನವರು ಈ ನಾಡನ್ನು ಸಮಾನತೆಯ ಮೂಲಕ ಸಮೃದ್ಧ ಬದುಕಿಗೆ ತಂದವರು. ಪದವಿ ನಂತರ ನಾನು ಸಮಾಜಕ್ಕೆ ಯಾವ ಕೊಡುಗೆ ಕೊಡಬೇಕು ಎಂಬುದನ್ನು ಅರ್ಥೈಸಿಕೊಂಡು ಹೊಸ ಬದುಕಿನತ್ತ ಸಾಗಬೇಕು. ಪ್ರತಿಯೊಬ್ಬರಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಅಬ್ದುಲ್ ಕಲಾಂ ನಮಗೆ ಸ್ಫೂರ್ತಿಯಾಗಬೇಕೆಂದರು.
ದಾವಣಗೆರೆ ವಿವಿ ಎನ್.ಎಸ್.ಎಸ್. ಸಂಯೋಜಕ ಡಾ. ಅಶೋಕಕುಮಾರ ವಿ.ಪಾಳೇದ ಮಾತನಾಡಿ, ವಿದ್ಯಾಥಿಗಳಿಗೆ ಪಠ್ಯತರ ಚಟುವಟಿಕೆಗಳು ಪ್ರತಿಭೆಯನ್ನು ಅನಾವರಣಗೊಳಿಸಲು ಮುಖ್ಯ ಪಾತ್ರ ವಹಿಸುತ್ತವೆ. ಸಮಸಮಾಜದ ನಿರ್ಮಾಣದ ಸಂದರ್ಭಕ್ಕೆ ಬಸವಣ್ಣನವರು ಕಾರಣರಾಗಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಅತಿಹೆಚ್ಚಿನ ಗೌರವವಿದೆ ಎಂದರೆ ಅದಕ್ಕೆ ಕಾರಣ 12ನೇ ಶತಮಾನದ ಶರಣರ ಆಂದೋಲನ. ಸ್ತ್ರೀ ಸಮಾನತೆಗೆ ಹೆಚ್ಚಿನ ಮಹತ್ವ ನೀಡಿತು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಬೇಕು. ನಾವು ಅವಕಾಶಗಳನ್ನು ಬಳಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒತ್ತಡದಿಂದ ಹೊರಬರಬೇಕೆಂದರೆ ಪುಸ್ತಕಗಳನ್ನು ಓದಬೇಕು. ತಂದೆ-ತಾಯಿಗಳ ಆದರ್ಶಗಳು ನಮಗೆ ಪ್ರೇರಣೆಯಾಗಬೇಕೆಂದರು.
ಮುಖ್ಯಅತಿಥಿ ಡಾ. ಜಿ.ಇ. ಬೈರಸಿದ್ದಪ್ಪ ಮಾತನಾಡಿ, ವ್ಯಕ್ತಿ ತನ್ನ ಹೆಸರಿನ ಮೇಲೆ ಗುರುತಿಸಿಕೊಳ್ಳದೆ ವ್ಯಕ್ತಿತ್ವದಿಂದ ಗುರುತಿಸುವಂತೆ ಬೆಳೆಯಬೇಕು. ಅಂಥ ಸಾಮರ್ಥ್ಯ ನಿಮ್ಮಲ್ಲಿದ್ದರೆ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಸಾಮರ್ಥ್ಯದಿಂದ ಕಾಲೇಜು ಉತ್ತುಂಗ ಸ್ಥಾನಕ್ಕೇರುತ್ತದೆ ಎಂದು ಹೇಳಿದರು.
ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುನಾಥ ರೆಡ್ಡಿ, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಲ್.ಈಶ್ವರಪ್ಪ, ಪದವಿ ವಿದ್ಯಾರ್ಥಿಗಳಾದ ಅಮೃತಸಿರಿ. ಯಶಸ್ವಿನಿ ಮಾತನಾಡಿದರು.
ಪ್ರಥಮ, ದ್ವಿತೀಯ ಮತ್ತು ತೃತೀಯ ಬಿ.ಎ., ಬಿ.ಕಾಂ. ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕು| ಪವಿತ್ರ - ಕು| ಚಂದನ ಪ್ರಾರ್ಥಿಸಿದರು. ನವೀನ್ ಸ್ವಾಗತಿಸಿದರು. ಕು| ಬಿಂದು ಮತ್ತು ಕು| ಜೈನಾಬ್ ನಿರೂಪಿಸಿದರು.











