
2 Oct 2024
ಚಿತ್ರದುರ್ಗ, ಅ.2 ನಮ್ಮ ಶರೀರದಲ್ಲಿ ಅಷ್ಟದಳದ ಕಮಲದೊಂದಿಗೆ 112 ಚಕ್ರಗಳಿವೆ. ಅವುಗಳು ಶುದ್ಧ ಪ್ರಸಿದ್ಧವಾದರೆ ಇಡೀ ಶರೀರವೇ ಕಲ್ಯಾಣವಾಗುತ್ತದೆ. ಆ ಕಲ್ಯಾಣಗೊಂಡ ಮನಸ್ಸಿನಿಂದ ಸಮಾಜ ಸ್ವಚ್ಛ, ಸುಂದರವಾಗಲು ಪ್ರೇರಣೆ ನೀಡುತ್ತದೆ ಎಂದು ವೈದ್ಯ ಶ್ರೀ ಚನ್ನಬಸವಣ್ಣ ಅವರು ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವ 2024 ಹಾಗೂ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಪ್ರಯುಕ್ತ ಏರ್ಪಡಿಸಿರುವ 10 ದಿನಗಳ ಯೋಗ ಆರೋಗ್ಯ ಅಧ್ಯಾತ್ಮ ಶಿಬಿರದ 7ನೇ ದಿನದ ಇಂದು ಬೆಳಗು ಮುಂಜಾನೆಯಲ್ಲಿ ಯೋಗ ಪ್ರಾತ್ಯಕ್ಷಿಕೆ ಹೇಳಿಕೊಡುತ್ತಾ ದೇಹ ಆರೋಗ್ಯವಾಗಿರುವುದೇ ಕಲ್ಯಾಣ. ಆರೋಗ್ಯವಂತ ಮನುಷ್ಯನಿಂದ ವೃಷ್ಟಿ ಮತ್ತು ಸಮಷ್ಠಿ ಉದ್ದಾರದ ಜೊತೆಗೆ ಕಲ್ಯಾಣ ರಾಜ್ಯ ಸ್ಥಾಪನೆಗೆ ಇಂಬು ನೀಡುತ್ತದೆ. ಅದಕ್ಕಾಗಿ ಬಸವಾದಿ ಶರಣರು ಸಕಲ ಜೀವರಾಶಿಗೂ ಲೇಸನ್ನೇ ಬಯಸಿದರು. 84 ಲಕ್ಷ ಜೀವರಾಶಿ ದಾಟಿ ಮನುಷ್ಯ ಜನ್ಮಕ್ಕೆ ನಾವು ಬಂದಿದ್ದೇವೆ. ಆದ್ದರಿಂದ ದೇಹ ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಕಲ್ಯಾಣಗೊಂಡ ಮನಸ್ಸಿನಿಂದ ಯಾವುದೇ ರಾಗ, ದ್ವೇಷ, ಮಾತ್ಸರ್ಯ ಇರುವುದಿಲ್ಲ. ಅಂತಹ ಪ್ರತಿಜ್ಞೆಯನ್ನು ನಾವು ಮಾಡಿಕೊಂಡಾಗ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು. ಅದರಂತೆ ವಿವಿಧ ಆಸನಗಳನ್ನು ಮಾಡಿಸುತ್ತಾ ಯೋಗದ ಮಹತ್ವವನ್ನು ಅರುಹುತ್ತ ನಡೆದರು.
ಇದೇ ಸಂದರ್ಭದಲ್ಲಿ ಮೂವರು ಮಹಾತ್ಮರ ಜಯಂತಿಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರು. ಲಾಲ್ ಬಹದ್ದೂರ್ ಶಾಸ್ತ್ರೀಜಿ ಹಾಗೆ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಜಯದೇವ ಮುರಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ಮಾತನಾಡಿ, ಒಬ್ಬ ಆದರ್ಶ ರಾಜಕಾರಿಣಿ ಹೇಗಿರಬೇಕೆಂದರೆ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ತರಹ ಇದ್ದರೆ ಇಡೀ ನಾಡು ಕಲ್ಯಾಣ ನಾಡಾಗಿ ಸುಭಿಕ್ಷವಾಗಲು ಸಹಾಯಕವಾಗುತ್ತದೆ. ಅಂತಹ ಮಹನೀಯರು ನಮ್ಮ ದೇಶದವರು. ಅವರು ನಮ್ಮವರು ಎಂದು ಹೇಳಲು ಸಂತೋಷ ಎನಿಸುತ್ತದೆ. ಉಪವಾಸದ ಮೂಲಕವೇ ಬ್ರಿಟಿಷರನ್ನ ದೇಶದಿಂದ ಓಡಿಸಿದ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರದು. ಸತ್ಯ, ಅಹಿಂಸೆ, ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಗಾಂಧೀಜಿಯವರ ಆದರ್ಶ ಮೇರುಗುಣಗಳು. ಚಿತ್ರದುರ್ಗ ಬೃಹನ್ಮಠವನ್ನು 53 ವರ್ಷಗಳ ಕಾಲ ಸುದೀರ್ಘವಾಗಿ ಯಶಸ್ವಿಯಾಗಿ ಮುನ್ನಡೆಸಿ ಮಾದರಿ ಮಹಾಸ್ವಾಮಿಗಳೆಂದು ಕೀರ್ತಿಗಳಿಸಿದ ಜಯದೇವ ಜಗದ್ಗುರುಗಳವರ ಜಯಂತಿ ಸಂದರ್ಭದಲ್ಲಿ ನಾವೆಲ್ಲ ಇದ್ದೇವೆ. ಇಂತಹ ಆದರ್ಶ ತ್ರಿಮೂರ್ತಿಗಳ ಜಯಂತಿಗೆ ನಾವೆಲ್ಲ ಇಂದು ಸಾಕ್ಷಿಯಾಗಿರುವುದು ನಮ್ಮ ಪುಣ್ಯ ವಿಶೇಷವೇ ಸರಿ ಎಂದು ಹೇಳಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ, ಎಸ್.ಜೆ.ಎಂ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ, ಎಸ್.ಜೆ. ಎಂ ಕನ್ನಡ ಮಾಧ್ಯಮ ಶಾಲೆ ಹಾಗೂ ಎಸ್.ಜೆ.ಎಂ ಚಿತ್ರಕಲಾ ಶಾಲೆ ಇವರ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಜಮುರಾ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ಸಿದ್ದಗಂಗಮ್ಮ ಸ್ವಾಗತಿಸಿದರು. ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಸುಮಾ ರಾಜಶೇಖರ್ ಶರಣು ಸಮರ್ಪಣೆ ಮಾಡಿದರು.







