
8 Aug 2024
ಚಿತ್ರದುರ್ಗ/ಹೊಳಲ್ಕೆರೆ : ৬. ৪ ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿಂದು ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 30ನೇ ಸ್ಮರಣೋತ್ಸವ ಹಾಗು ಚಿನ್ಮೂಲಾದ್ರಿ ಚಿತ್ಕಳೆ ಸ್ಮರಣೋತ್ಸವ ಸಂಪುಟ ಬಿಡುಗಡೆ ಸಮಾರಂಭ ನೆರವೇರಿತು.
ದಿವ್ಯಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರಮಹಾಸ್ವಾಮಿಗಳು ಮಾತನಾಡಿ, 1961ರಲ್ಲಿ ಧಾರವಾಡದ ಮೃತ್ಯುಂಜಯ ಶ್ರೀಗಳು ಗುಬ್ಬಿಯಲ್ಲಿ ನನಗೆ ಮಲ್ಲಿಕಾರ್ಜುನ ಶ್ರೀಗಳ ಆಶೀರ್ವಾದವಾಯಿತು. ಜಯವಿಭವ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿರುವಾಗ ಮುಂದಿನ ಉತ್ತರಾಧಿಕಾರಿ ಆಯ್ಕೆಗೆ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರಿಗೆ ಜವಾಬ್ದಾರಿ ಕೊಟ್ಟರು. ಆದರೆ ಶ್ರೀಗಳು ಮೃತ್ಯುಂಜಯಪ್ಪಗಳಿಗೆ ಅಧಿಕಾರ ಕೊಟ್ಟಾಗ ಹಾವೇರಿಯ ಮಲ್ಲಿಕಾರ್ಜುನ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿದರು. ಜಯದೇವ ಶ್ರೀಗಳ ಅನುಗ್ರಹ, ಜಯವಿಭವ ಶ್ರೀಗಳ ಆಶೀರ್ವಾದ ಮಲ್ಲಿಕಾರ್ಜುನ ಶ್ರೀಗಳಿಗೆ ಇತ್ತು. ಉತ್ತರಾಧಿಕಾರಿ ಕಾರ್ಯಕ್ರಮದ ಜವಾಬ್ದಾರಿಯನ್ನು ತುಮಕೂರಿನ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಅಂದಿನಿಂದ ನಿರಂತರವಾಗಿ ಶ್ರೀಮಠದ ಅಭಿವೃದ್ಧಿಗೆ ತೊಡಗಿಸಿಕೊಂಡರು. ಅವರದು ಅಂತರ್ಮುಖಿ ಸಾಧನೆ. ಎಲ್ಲರೂ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ಹೇಳಿದವರು. ನಮ್ಮೆಲ್ಲರಿಗೆ ನಿರಂತರವಾಗಿ ಸ್ಫೂರ್ತಿ ತುಂಬುತ್ತಿದ್ದರು ಎಂದು ಸ್ಮರಿಸಿದರು.
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಸವತತ್ತ್ವ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ನಮ್ಮ ಬದುಕಿಗೆ ಚೈತನ್ಯ ತುಂಬಿದವರು ಬಸವಣ್ಣನವರು. ಬಸವಣ್ಣನೆಂದರೆ ಜಗತ್ತು. ಇಡೀ ವಿಶ್ವಕ್ಕೆ ಗುರುವಾದವರು. ಹೊಸ ಧರ್ಮದ ಹುಟ್ಟಿಗೆ ಕಾರಣರಾದವರು. ಅವರಿಗೂ ಮೊದಲು ದಯಾಹೀನವಾದ ಧರ್ಮವಿತ್ತು. ಮೊದಲು ಪುರಾಣ, ಶಾಸ್ತ್ರ ವೇದಗಳ ಬಗ್ಗೆ ಪ್ರಚಾರ ನಡೆದಿತ್ತು. ಲಿಂಗಾಯತ ಎಂದರೆ ಹಿಂದೂ ಧರ್ಮದ ಭಾಗವಲ್ಲ. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ನಾವು ವೈದಿಕ ಪರಂಪರೆಯನ್ನು ತಲೆಯಲ್ಲಿ ತುಂಬಿಕೊಂಡಿದ್ದೇವೆ. ಮಲ್ಲಿಕಾರ್ಜುನ ಶ್ರೀಗಳು ಎಲ್ಲರನ್ನು ಪ್ರೀತಿಯಿಂದ ನೋಡುತ್ತಿದ್ದರು. ಗುರುತ್ವಕ್ಕೆ ಸಾಕ್ಷಿಯಾಗಿದ್ದರು. ಸಿರಿಗೆರೆ ಮಠಕ್ಕೂ ಮುರುಘಾಮಠಕ್ಕೂ ಹಾವು ಮುಂಗಸಿಯಂತಿತ್ತು. ಆದರೆ ಮಲ್ಲಿಕಾರ್ಜುನ ಶ್ರೀಗಳು ಅದನ್ನು ತಿಳಿಗೊಳಿಸಿದರು. 1977ರಲ್ಲಿ ನಮ್ಮ ಪಟ್ಟಾಭಿಷೇಕಕ್ಕೆ ದಯಮಾಡಿಸಿ ನಮಗೆ ಆಶೀರ್ವಾದ ಮಾಡಿದ್ದರು. 1979ರಲ್ಲಿ ಸಿರಿಗೆರೆ ಶ್ರೀಗಳ ಪಟ್ಟಾಧಿಕಾರ ಸಂದರ್ಭದಲ್ಲಿ ಆಶೀರ್ವಾದ ಮಾಡಿದ್ದರು. ಬಸವತತ್ವವನ್ನು ಹೃಧ್ವತ್ ಮಾಡಿಕೊಂಡಿದ್ದರು. ಇಂದು ಸ್ವಾಮಿಗಳಾದ ನಾವು ಬದಲಾಗಬೇಕಿದೆ. ಗುರುವಿಗೆ ಅಂಜಿ ನಡೆಯುವ ಭಕ್ತ, ಭಕ್ತನಿಗೆ ಅಂಜುವ ಗುರು ಇದ್ದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ಹೊತ್ತು ಬಂದಾಗ ಕೊಡೆ ಹಿಡಿಯಬಾರದು. ಮಠಾಧಿಪತಿಗಳ ಮೇಲೆ ಸಾಕಷ್ಟು ಆಪಾದನೆಗಳಿವೆ. ಅಂಥವುಗಳನ್ನು ತಿದ್ದಿ ಹೇಳಬೇಕು. 30ನೇ ವರ್ಷದ ಶ್ರೀಗಳ ಸ್ಮರಣೋತ್ಸವ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದರು.
ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮಿಗಳು ಮಾತನಾಡಿ, ಶ್ರೀಗಳೊಂದಿಗಿನ ನನ್ನ ಒಡನಾಟ ಬಹಳ ದಿನಗಳದ್ದು. ಅವರೊಂದಿಗಿನ ಸಂದರ್ಭಗಳು ಉತ್ತಮವಾದುವು. ಅವರು ಆಧುನಿಕ ಅಲ್ಲಮಪ್ರಭು ಇದ್ದಹಾಗೆ. ಅವರು ಜ್ಞಾನಿಗಳು. ಸಮದರ್ಶಿತ್ವವುಳ್ಳವರು. ಸರ್ವ ಸಮಾಜಗಳ ಶ್ರೇಯಸ್ಸು ಬಯಸುವ ಶುದ್ಧ ಮನಸ್ಸಿನವರು. ಅವರು ಸಮಾಜಕ್ಕೆ ಬೆಳಕಿನ ರೀತಿ ಇದ್ದರು. ಅವರು ಬೆಳಕಿನಲ್ಲಿ ಬೆಳೆದು, ಬೆಳಕನ್ನು ಬಿತ್ತಿ ಬೆಳಕಾದವರು. ಅವರ ಸಂಪರ್ಕದಿಂದ ನನ್ನ ಮನಸ್ಸು, ಬುದ್ಧಿ ಎಲ್ಲವನ್ನು ತಿದ್ದಿಕೊಂಡಿದ್ದೇನೆ. ಬೇರೆ ಸ್ವಾಮಿಗಳವರ ಸೇವೆ ಮಾಡುವ ಅವಕಾಶ ಇದ್ದರೂ ಸಹ ಮಲ್ಲಿಕಾರ್ಜುನ ಶ್ರೀಗಳವರ ಪ್ರೀತಿ ಆಶೀರ್ವಾದ ಯಾವತ್ತೂ ನನ್ನ ಮೇಲೆ ಇತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಶ್ರೀಮಠವನ್ನು ಸದೃಢ ಮಾಡಿದರು. ಅನಾವಶ್ಯಕವಾಗಿ ಹಣ ವ್ಯರ್ಥ ಮಾಡುತ್ತಿರಲಿಲ್ಲ. ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಭಕ್ತರ ಸಹಾಯದಿಂದ ಅದನ್ನು ನೆರವೇರಿಸುತ್ತಿದ್ದರು. ನಾವುಗಳು ನಮ್ಮ ಸಂಸ್ಕೃತಿ, ಪರಂಪರೆಗಳ ಜ್ಞಾನ ಪಡೆದುಕೊಳ್ಳಬೇಕು. ಮಠಾಧಿಪತಿಗಳೆಂದರೆ ಸರ್ವಜ್ಞರಲ್ಲ. ಅವರ ಮಾತೇ ಅಂತಿಮವಲ್ಲ. ಜೈನ, ಬೌದ್ಧಧರ್ಮಕ್ಕೆ ಪರ್ಯಾಯವಾಗಿ ಧರ್ಮ ಸಂಸ್ಕೃತಿಯನ್ನು ರೂಪಿಸಿದ್ದು ವಚನಕಾರರ ಹೋರಾಟ. ಅದು ಶಿವಭಕ್ತಿಯನ್ನು ಊರ್ಜಿತಗೊಳಿಸಿತು. ದ್ರಾವಿಡ ಸಂಸ್ಕೃತಿಯನ್ನು ಪುನರುಜ್ಜಿವನಗೊಳಿಸಿತು. ನಮಗೆ ಅನುಭಾವ ಪರಂಪರೆ ಇದೆ. ಮಠಾಧೀಶರು ಉತ್ಸಾಹದಿಂದ ಪರಂಪರೆಯನ್ನು ಬಿತ್ತಬೇಕು. ಪರಂಪರೆಯನ್ನು ತಿರಸ್ಕರಿಸಬಾರದು. ಪಾಶ್ಚಾತ್ಯ ಮಾದರಿಯಲ್ಲಿ ಬಸವಣ್ಣನವರನ್ನು ಸೀಮಿತಗೊಳಿಸಬಾರದು. ಸಂಸ್ಕೃತಿಯ ನೆಲೆಯಲ್ಲಿ ಪರಂಪರೆ ನೋಡಬೇಕು. ನಮ್ಮ ಕಾಲಘಟ್ಟದ ದಾರ್ಶನಿಕರು ಘನವ್ಯಕ್ತಿತ್ವವುಳ್ಳವರು. ಮಠಾಧೀಶರು ನೈತಿಕ ಶಕ್ತಿಯನ್ನು ಉಳಿಸಿಕೊಳ್ಳಬೇಕು. ಮುರುಘಾಮಠದ ಬೆಳಕು ಎಲ್ಲೆಡೆ ಪಸರಿಸಲಿ ಎಂದು ನುಡಿದರು.
ಇಳಕಲ್ನ ಶ್ರೀ ಗುರುಮಹಾಂತ ಸ್ವಾಮಿಗಳು ಮಾತನಾಡಿ, ದಾರ್ಶನಿಕರದು ನಿಸ್ವಾರ್ಥ ಸೇವೆ. ಸಕಲ ಜೀವರಾಶಿಗಳ ಮೇಲೆ ಅಂತಃಕರಣ ಇರಬೇಕು. ಹಾಗಾಗಿ ಮಲ್ಲಿಕಾರ್ಜುನ ಶ್ರೀಗಳಲ್ಲಿ ದಾರ್ಶನಿಕತೆ ಇತ್ತು. ಅವರು ದೊಡ್ಡ ಪಂಡಿತರು. ಅವರ ದಾರ್ಶನಿಕತೆಯ ಅನಾವರಣ ಈ ಪುಸ್ತಕದಲ್ಲಿದೆ. ಶ್ರೀಗಳು ಅಲ್ಲಮ ಸ್ವರೂಪಿಗಳು. ಅವರ ದಿನಚರಿ ತುಂಬಾ ಚೆನ್ನಾಗಿತ್ತು. ಪಂಡಿತರನ್ನು ಪ್ರೀತಿ ಮಾಡುತ್ತಿದ್ದರು. ಅಂಥವರ ಮೇಲೆ ಅವರಿಗೆ ಕರುಣೆ ಇತ್ತು. ಅವರ ಶಿವಯೋಗ ಶಕ್ತಿಯಿಂದ ಹಾರೈಸುತ್ತಿದ್ದರು. ಬಡವರ ಬಗ್ಗೆ ಕಾಳಜಿ ಇತ್ತು. ಬಸವತತ್ವದ ಮೇಲೆ ಅತೀವ ನಿಷ್ಠೆ, ಜಗತ್ತಿಗೆ ಬಸವಣ್ಣನೇ ಭಕ್ತ ಎನ್ನುತ್ತಿದ್ದರು. ಕಷ್ಟ ಕಾಲದಲ್ಲಿ ಸಂಸ್ಥಾನವನ್ನು ಎತ್ತಿ ಹಿಡಿದರು. ಅವರಿಗೆ ಭಕ್ತರ ಮೇಲೆ ಅಪಾರವಾದ ಪ್ರೇಮ. ಅವರಿಗೆ ತುಂಬಾ ಸಿಟ್ಟು ಅಷ್ಟೇ ಪ್ರೀತಿವಾತ್ಸಲ್ಯವುಳ್ಳವರು ತಾಯಿ ಗುಣ ಅವರದಾಗಿತ್ತು ಎಂದು ನುಡಿದರು.
ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಅಥಣಿಯ ಶಿವಯೋಗಿಗಳ ಆಶೀರ್ವಾದದಲ್ಲಿ ಬೆಳೆದವರು ಮಲ್ಲಿಕಾರ್ಜುನ ಶ್ರೀಗಳು. ಧಾರವಾಡ ಮುರುಘಾಮಠಕ್ಕೆ ಚಿತ್ರದುರ್ಗ ಮುರುಘಾಮಠಕ್ಕೆ ಹಾಗು ಅಥಣಿಯ ಗಚ್ಚಿನಮಠಕ್ಕೆ ಅವಿನಾಭಾವ ಸಂಬಂಧ ಇತ್ತು. ಹಿಂದೂ ಎನ್ನುವುದು ಮಹಾಸಾಗರ. ಅಲ್ಲಿ ಎಲ್ಲರೂ ಇದ್ದರು. ಅಲ್ಲಿ ಲಿಂಗಾಯತ, ವೈದಿಕ, ಬೌದ್ಧ, ಜೈನರು ಇದ್ದರು. ವೀರಶೈವ ತತ್ವ ಲಿಂಗಾಯತ ತತ್ವ ಬೇರೆ ಬೇರೆ ಇರಬಹುದು. ಇವರು ಒಂದಾದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದನ್ನು ಅನುಮೋದಿಸುತ್ತಿದ್ದವರು ಮಲ್ಲಿಕಾರ್ಜುನ ಶ್ರೀಗಳು ಎಂದರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ಮಾತನಾಡಿ, ನನ್ನನ್ನು ಅತ್ಯಂತ ಪ್ರೀತಿಯಿಂದ ಮಲ್ಲಿಕಾರ್ಜುನ ಶ್ರೀಗಳು ಕಾಣುತ್ತಿದ್ದರು. ಸ್ವಾಮೀಜಿಗಳ ಒಡನಾಟದಲ್ಲಿದ್ದ ಅನೇಕ ಸಂದರ್ಭಗಳನ್ನು ನೆನಪಿಸಿಕೊಂಡರಲ್ಲದೆ, ಶಿವಪೂಜೆಯಲ್ಲಿ ನಿಷ್ಠಾವಂತರು ರುದ್ರಾಭಿಷೇಕನವನ್ನು ಮಾಡದೆ ಪ್ರಸಾದ ಮಾಡುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ, ಇದೊಂದು ವಿನೂತನವಾದ ಕಾರ್ಯಕ್ರಮ. ಶ್ರೀಗಳ ಬದುಕು ಮತ್ತು ಸಾಧನೆ ಅಪೂರ್ವವಾದುದು. ಶ್ರೀಗಳ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುವುದು ಎಂದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಶರೀರ ಒಂದುದಿನ ಕರಗಿ ಹೋಗುತ್ತದೆ. ಆದರೆ ಮಾಡಿದ ಸೇವೆ ಎಂದಿಗೂ ಕರಗುವುದಿಲ್ಲ. ಮಲ್ಲಿಕಾರ್ಜುನ ಶ್ರೀಗಳ ಸಾಧನೆಗಳು ಇಂದಿಗೂ ನೂತನವಾಗಿವೆ. ಶ್ರೀಗಳವರು ಸ್ಮರಣೀಯರು. ಈ ಸ್ಮರಣೆ ನನಗೆ ಸಂತೋಷ ತಂದಿದೆ ಎಂದರು.
ಹೆಬ್ಬಾಳು ಶ್ರೀ ರುದೇಶ್ವರ ಸ್ವಾಮಿಗಳು ಮಾತನಾಡಿ, ನನಗೆ ತಮ್ಮ ಮರಣದ ದಿನಾಂಕವನ್ನು ಬರೆದು ಹೇಳಿದ್ದರು. ಆಗಸ್ಟ್ 8ನೇ ತಾರೀಕು ಒಂಟಿಕಂಬದ ಮಠದಲ್ಲಿ ವ್ಯವಸ್ಥೆ ಮಾಡಲು ತಿಳಿಸಿದರು. ಶ್ರೀಗಳು ಶಿಕ್ಷಣಪ್ರೇಮಿಗಳು. ಅಂದಿನ ಮಠದ ಪರಿಸ್ಥಿತಿ ಕಷ್ಟದಲ್ಲಿತ್ತು. ಅಂತಹ ಸ್ಥಿತಿಯನ್ನು ಬಹಳವಾಗಿ ಸುಧಾರಿಸಿದರು. ಅವರ ಮಾತುಗಳು ಜ್ಯೋತಿರ್ಲಿಂಗ ಎಂದು ಹೇಳಿದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, ನಮ್ಮ ಕುಟುಂಬಕ್ಕು ಮತ್ತು ಮುರುಘಾಮಠಕ್ಕೆ ಅವಿನಾಭಾವ ಸಂಬಂಧ ಇತ್ತು. ಶ್ರೀಗಳು ತಮ್ಮ ಜೀವನವನ್ನು ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಿದ್ದರು ಎಂದರು.
ಪ್ರೊ. ಲಕ್ಷ್ಮಣ ತೆಲಗಾವಿ ಮಾತನಾಡಿ, 1989ರಲ್ಲಿ ಚಿನ್ಮೂಲಾದ್ರಿ ಚೇತನ ಬಿಡುಗಡೆಯಾಗಿತ್ತು. ಈಗ ಚಿನ್ಮೂಲಾದ್ರಿ ಚಿತ್ಕಳೆ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿ ಬೃಹತ್ ಕೃತಿ ಹೊರತಂದಿದ್ದೇನೆ. ನನ್ನ ಜೊತೆ ಅನೇಕರು ಸಹಕಾರ ನೀಡಿದ್ದಾರೆ. ನನಗೆ ಗುರುಗಳ ಸೇವೆ ಈ ರೀತಿ ಮಾಡುವ ಭಾಗ್ಯ ದೊರೆಯಿತು. ಇದು ಮೊದಲ ಸಂಪುಟ. ಎರಡನೇ ಸಂಪುಟವನ್ನು ಹೊರತರುವ ಯೋಜನೆಯಲ್ಲಿದ್ದೇವೆ ಎಂದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ
ಸ್ವಾಮಿಗಳು, ಶ್ರೀ ಮೋಕ್ಷಪತಿ ಸ್ವಾಮಿಗಳು, ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಎಸ್.ಎನ್. ಚಂದ್ರಶೇಖರ್, ಡಾ.
ಬಸವಜಯಚಂದ್ರ ಸ್ವಾಮಿಗಳು, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ಶ್ರೀ
ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ರಮಾನಂದ ಸ್ವಾಮಿಗಳು, ಶ್ರೀ ಶಿವಬಸವ ಸ್ವಾಮಿಗಳು ಬೇಲೂರು ಇನ್ನು ಮುಂತಾದ
ಹರಗುರು ಚರಮೂರ್ತಿಗಳು ಹಾಗೂ ಡಾ. ಕೆ.ಎಲ್. ರಾಜಶೇಖರ್, ಎ.ವಿ. ಉಮಾಪತಿ, ಪಿ. ರಮೇಶ್, ಎಚ್. ಆನಂದಪ್ಪ,
ಡಿ.ಎಸ್. ಸುರೇಶ್ಬಾಬು, ಬಿ.ಎಸ್. ರುದ್ರಪ್ಪ, ಆರ್.ಎ. ಅಶೋಕ, ಕೆ.ಸಿ. ರಮೇಶ್, ವಿಜಯಸಿಂಹ, ಎಂ.ಕೆ. ತಾಜಪೀರ್
ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಚಿನ್ಮೂಲಾದ್ರಿ ಚಿತ್ಕಳೆ ಸ್ಮರಣೋತ್ಸವ ಸಂಪುಟವನ್ನು ವೇದಿಕೆಯಲ್ಲಿದ್ದ ಎಲ್ಲಾ ಪೂಜ್ಯರು ಹಾಗು ಅತಿಥಿಗಳು ಬಿಡುಗಡೆ ಮಾಡಿದರು. ಸಮುದಾಯ ಭವನದ ರೂಂಗಳನ್ನು ಉದ್ಘಾಟಿಸಲಾಯಿತು. ಬೆಂಗಳೂರು ಲಕ್ಷ್ಮೀ ಮುದ್ರಣಾಲಯದ ಅಶೋಕ್ ಕುಮಾರ್ ಅವರು ಶ್ರೀಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು.
ಗಾನಯೋಗಿ ಪಂಚಾಕ್ಷರಿ ಬಳಗದವರು ವಚನ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಡಾ. ಬಸವಪ್ರಭು ಸ್ವಾಮಿಗಳು ಸ್ವಾಗತಿಸಿದರು. ಪಿ.ಹೆಚ್. ಮುರುಗೇಶ್ ನಿರೂಪಿಸಿದರು.




















