
4 Oct 2024
ಚಿತ್ರದುರ್ಗ, ಅ,4, ಪ್ರಕೃತಿ ಮೂಲಕವೇ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರ ಅರಿವು ಇರಬೇಕಷ್ಟೇ. ನಿಸರ್ಗ ಸರ್ವ ರೋಗಕ್ಕೆ ಔಷಧಿಯನ್ನು ಕೊಡುವ ಶಕ್ತಿ ಹೊಂದಿರುವ ಕಾರಣ. ಅದರಲ್ಲಿ ಮಣ್ಣಿನ ಚಿಕಿತ್ಸೆ ಒಂದು ವಿಧಾನವಾಗಿದೆ ಇದರ ಮೂಲಕ ಹಲವಾರು ರೋಗಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಮಣ್ಣಿಗೆ ಅದ್ಭುತವಾದ ಶಕ್ತಿ ಮತ್ತು ತಾಂತ್ರಿಕತೆ ಇದೆ ಎಂದು ಯೋಗಗುರು, ವೈದ್ಯಶ್ರೀ ಚನ್ನಬಸವಣ್ಣ ಅವರು ತಿಳಿಸಿದರು.
ಅವರು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವ 2024 ಹಾಗೂ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತೋತ್ಸವದ ಪ್ರಯುಕ್ತ ಏರ್ಪಡಿಸಿರುವ ಹತ್ತು ದಿನಗಳ ಆರೋಗ್ಯ ಆಧ್ಯಾತ್ಮ ಪ್ರವಚನದ 9ನೇ ದಿನದ ಪ್ರಕೃತಿ ಚಿಕಿತ್ಸೆ ವಿಚಾರ ಕುರಿತು ಮಾತನಾಡುತ್ತಾ, ಜಲ ಶಕ್ತಿಯ ಚಿಕಿತ್ಸೆಯ ವಿಧಾನದ ಮೂಲಕ ಹಲವಾರು ರೋಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದರು. ಅದರ ಪ್ರಕಾರ ನೀರನ್ನು ಕ್ರಮಬದ್ಧವಾಗಿ ಕುಡಿಯಬೇಕು. ಇದರಿಂದ ನಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ಆಹಾರವನ್ನೂ ನಾವು ಕ್ರಮಬದ್ದವಾಗಿ ಸೇವಿಸಬೇಕೆಂದ ಅವರು ನಾವು ಆಹಾರ ಸೇವಿದ ತಕ್ಷಣ ನೀರನ್ನು ಕುಡಿಯಬಾರದು. ಏಕೆಂದರೆ, ಅದರಿಂದ ಕೆಲವೊಂದು ಶಾರೀರಿಕ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಊಟ ಉಪಹಾರ ಸೇವಿಸಿದ ನಂತರ 45 ನಿಮಿಷದ ನಂತರ ನೀರನ್ನು ಕುಡಿಯಬೇಕು. ಇದರಿಂದ ನಮ್ಮ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಕಾರಾತ್ಮಕವಾದ ಆಲೋಚನೆಗಳಿಂದ ನಮ್ಮ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ನಮ್ಮ ಪಾದವು ಮಣ್ಣಿಗೆ ಸ್ಪರ್ಶವಾಗುತ್ತಿರಬೇಕು. ಅದರಂತೆ ವಾಯು ಅಂದರೆ ಗಾಳಿ ಚಿಕಿತ್ಸೆಯ ಮುಖಾಂತರವಾಗಿ ನಮ್ಮ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಆ ಮೂಲಕ ಉತ್ತಮವಾದಂತಹ ಗಾಳಿಯನ್ನು ಸೇವಿಸುವುದರ ಮುಖಾಂತರವಾಗಿ ಉತ್ತಮವಾದ ಆರೋಗ್ಯ ನಮ್ಮದಾಗುತ್ತದೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರೆ ನಾವು ನಿಜವಾದ ಅನುಷ್ಠಾನವನ್ನು ಪಡೆದುಕೊಳ್ಳಬಹುದು. ಪರಿಪೂರ್ಣ ಪ್ರಾಣಾಯಾಮವು ಉತ್ತಮ ಆರೋಗ್ಯವನ್ನು ತಂದುಕೊಡುತ್ತದೆ ಎಂದರು. ಪ್ರಾಣಯಾಮಕ್ಕಿಂತ ಮಿಗಿಲಾದ ಶಿವಯೋಗವಿದೆ ಎಂದರು. ಸಾಧನೆ ಮಾಡಿದವನಿಗೆ ಮಾತ್ರ ಬೋಧನೆ ಮಾಡುವ ಅರ್ಹತೆ ಇರುತ್ತದೆ ಎಂದು ಹೇಳಿದ ಅವರು ಪ್ರಜ್ಞಾಪೂರ್ವಕವಾಗಿ ಉಪವಾಸ ಮಾಡುವುದರಿಂದ ನಮ್ಮ ದೇಹವನ್ನು ಶುದ್ದೀಕರಣ ಮಾಡಿಕೊಳ್ಳಬಹುದು. ಇದರಿಂದ ದೇವರ ಹತ್ತಿರವೂ ಸಹ ಹೋಗಬಹುದಾಗಿದೆ. ಅಲ್ಲದೆ ನಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನೀಡಿದರೆ ಅದೇ ನಿಜವಾದ ಸಂಪತ್ತು ಎಂದು ತಿಳಿಸಿದರು. ಪ್ರಕೃತಿ ಆರಾಧನೆ, ಸದ್ವಿಚಾರ, ಸದ್ದಿನಯ, ನಿಜವಾದ ಧರ್ಮವೆಂದು ತಿಳಿಸಿದರು.
ಸಮ್ಮುಖವನ್ನು ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ ಆಸಕ್ತರಿಗೆ ಮಾತ್ರ ಆಧ್ಯಾತ್ಮದ ಶಿಕ್ಷಣ ಮತ್ತು ಪ್ರವಚನಗಳು ರುಚಿಸುತ್ತವೆ ಎಂದು ಹೇಳಿದರು. ನಿಮ್ಮ ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕೆ ಉದ್ದೇಶಗಳಿಗೆ ಬಳಸಿದರೆ ಅದು ಸದ್ದೀವಿನಿಯೋಗವಾಗುತ್ತದೆ ಮತ್ತು ಅದು ದೈವತ್ವಕ್ಕೆ ಸಮಾನ ಎಂದು ತಿಳಿಸಿದರು. ಜಗತ್ತಿನಲ್ಲಿ ಇಂದು ಬಸವಾದಿ ಶರಣರ ಆಚರಣೆ ಮತ್ತು ವಚನಗಳನ್ನು ನಾವೇನಾದರೂ ತಿಳಿದುಕೊಂಡು ಓದುತ್ತಿರುವುದಕ್ಕೆ ಮುಖ್ಯ ಕಾರಣ ಡಾ ಫ. ಗು.ಹಳಕಟ್ಟಿ ಅವರು. ಬಸವಾದಿ ಶರಣರ ಆಚರಣೆ ವಿಚಾರ ಮತ್ತು ವಚನಗಳನ್ನು ತಿಳಿದುಕೊಳ್ಳುವುದರ ಮುಖಾಂತರ ಸಂಸ್ಕಾರವನ್ನು ಪಡೆದುಕೊಳ್ಳಬಹುದು ಎಂದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಗುರುಮಟಕಲ್ ನ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಐತಿಹಾಸಿಕವಾದ ಮತ್ತು ಚಾರಿತ್ರಿಕ ವಾದಂತಹ ಉತ್ತಮವಾದ ಪರಂಪರೆಯನ್ನು ಹೊಂದಿದ ಈ ಮುರುಘಾ ಪರಂಪರೆಯಲ್ಲಿ ಶೂನ್ಯ ಪೀಠ ಸ್ಥಾಪಕ ಅಲ್ಲಮಪ್ರಭುದೇವರು, ಚನ್ನಬಸವಣ್ಣ, ಯಡಿಯೂರು ಸಿದ್ದಲಿಂಗೇಶ್ವರರು, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು ಮುಂತಾದ ಯೋಗಿಗಳನ್ನು ಪಡೆದುಕೊಂಡಿದೆ. ಅಲ್ಲದೆ ಮುರುಘಾ ಪರಂಪರೆಯನ್ನು ಉನ್ನತ ಸ್ಥಾನಕ್ಕೇರಿಸಿದ ಕೀರ್ತಿ ಮಹಾಗುರು ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ನುಡಿದರು. ಮುರುಘಾಮಠ ಪ್ರಾಚೀನ ಕಾಲದಿಂದಲೂ ಬಸವ ತತ್ವ ಆಚರಣೆ ಸಹಜ ಶಿವಯೋಗ ಮತ್ತು ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡು ಆಚರಣೆ ಮಾಡುತ್ತಾ ಬಂದಿರುತ್ತದೆ ಎಂದು ಹೇಳಿದರು. ವೈದ್ಯ ಶ್ರೀ ಚನ್ನಬಸವಣ್ಣನವರು ನಡೆಸಿಕೊಡುತ್ತಿರುವ ಯೋಗ ಆಧ್ಯಾತ್ಮ ಆರೋಗ್ಯ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅವಳಿಸಿಕೊಂಡರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು
ಸಲಹೆ ನೀಡಿದರು.
ವೇದಿಕೆಯಲ್ಲಿ ಶ್ರೀ ಸಿದ್ದಬಸವ ಕಬೀರಸ್ವಾಮಿಗಳು, ಶ್ರೀ ಬಸವನಾಗದೇವ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿಗಳು, ಶ್ರೀ ಬಸವ ಲಿಂಗಮೂರ್ತಿ ಸ್ವಾಮಿಗಳು, ಶ್ರೀ ಬಸವ ಹರಳಯ್ಯ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಮುರುಘಂದ್ರ ಸ್ವಾಮಿಗಳು, ಶಿವಕುಮಾರಸ್ವಾಮಿಗಳು, ಶ್ರೀ ಗೋವಿಂದ ಸ್ವಾಮಿಗಳು ಉಪಸ್ಥಿತರಿದ್ದರು.
ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ಪ್ರಶಾಂತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭಕ್ಕೆ ಜಮುರಾ ಕಲಾವಿದರು ವಚನ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ವಿದ್ಯಾ ನಿರೂಪಣೆ ನಡೆಸಿಕೊಟ್ಟರೆ ಸ್ವಾಗತವನ್ನು ಡಾ. ಅಮೃತ ನಡೆಸಿಕೊಟ್ಟರು.


