
6 Oct 2024
ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-2024ರ ಅಂಗವಾಗಿ ಆಯೋಜಿಸಿದ್ದ ವಚನ ಕಮ್ಮಟ ಗೋಷ್ಠಿ-02 ಪಂಚಾಚಾರ ವಿಷಯದ ಬಗ್ಗೆ ನಡೆಯಿತು. ಕಾರ್ಯಕ್ರಮದ ಸಮ್ಮುಖವನ್ನು ಹೆಗ್ಗುಂದದ ಶ್ರೀ ವನಕಲ್ ಮಲ್ಲೇಶ್ವರ ಮಠದ ಡಾ. ಬಸವ ರಮಾನಂದಸ್ವಾಮಿಗಳು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಪಂಚಾಚಾರಗಳಲ್ಲಿ ಲಿಂಗಾಚಾರ, ಶಿವಾಚಾರ, ಸದಾಚಾರ, ಧೃತಾಚಾರ, ಗಣಾಚಾರ ಗಳ ಬಗ್ಗೆ ವಿಷಯ ಮಂಡನೆ ಮಾಡಲಾಯಿತು.
ಪ್ರತಿಯೊಬ್ಬ ಶರಣರ ವಚನಗಳಲ್ಲಿ ಅಂಕಿತವಿದೆ. ಅವರವರ ದೈವವಿದೆ. ಸ್ವತಂತ್ರ ಎಂದರೇನು, ಸಮಾನತೆ ಎಂದರೇನು, ಜಾತ್ಯಾತೀತ ಎಂದರೇನು ಎಂಬುದನ್ನು ವಚನಗಳು ನಮಗೆ ಕಲಿಸಿಕೊಟ್ಟಿವೆ. ನಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡು ಮಾನವ ಮಹಾದೇವನಾಗುವ ದಾರಿಯನ್ನು ಶರಣರು ತೋರಿಸಿಕೊಟ್ಟಿದ್ದಾರೆ. ತಾನು ಏನಾಗಬೇಕು ಎಂಬುದನ್ನು ತಿಳಿಸುವುದು ರುದ್ರಾಕ್ಷಿ ವಿಭೂತಿಯಾಗಿದೆ. ನಾಳೆಗಾಗಿ ಕೂಡಿಸುವ ಏಕೈಕ ಜೀವಿ ಮಾನವ ಮಾತ್ರ ಈ ಸಂಗ್ರಹವು ಕೂಡ ಮಹಾಪಾತಕ, ಶರಣ ಧರ್ಮದಲ್ಲಿ ರುದ್ರಾಕ್ಷಿಯು ಅರಿವಿನ ಸಂಕೇತವಾಗಿದೆ ಎಂದು ಅಮೃತಾಪುರದ ಶಿಕ್ಷಕರಾದ ಟಿ.ಪಿ. ಉಮೇಶ್ ತಿಳಿಸಿದರು. ರುದ್ರಾಕ್ಷಿ ಲಿಂಗಾಯಿತರಿಗೆ ಗನ್ ಮ್ಯಾನ್ ಇದ್ದಂತೆ. ಅದು ಅಂಗದ ಮೇಲೆ ಇದ್ದರು ಅವರಿಗೆ ಯಾವ ವಾಮಚಾರ ಆಗುವುದಿಲ್ಲ. ಅದಕ್ಕೆ ವಿಶ್ವಕಾಂತ ಚೈತನ್ಯವನ್ನು ತನ್ನಲ್ಲಿ ಸೆಳೆದುಕೊಳ್ಳುವ ಶಕ್ತಿ ಇದೆ. ಅದು ವೈಜ್ಞಾನಿಕವಾಗಿ ಪ್ರಾಕೃತಿಕವಾಗಿ ಶಕ್ತಿಯನ್ನು ಹೊಂದಿದೆ. ಅದು ಇದ್ದರೆ ಯಾವ ಅಪಾಯವು ಆಗುವುದಿಲ್ಲ.
ಹಾವೇರಿಯ ವೀರೇಶ್ ಹಿತ್ತಲಮನಿ ಇವರು ಪಂಚಾಚಾರಗಳ ಮಂತ್ರವನ್ನು ಕುರಿತು ಮಾತನಾಡಿ ದೇಹದಲ್ಲಿ ಜೀವ ಯಾವಾಗ ಹೊರ ಹೋಗುತ್ತದೆಯೋ ಗೊತ್ತಿಲ್ಲ. ಇರುವಷ್ಟು ದಿನ ನಾವು ನಮ್ಮ ಅಂತರಂಗದ ಶುದ್ದಿಯ ಕಡೆಗೆ ಗಮನ ಅರಿಸಬೇಕು. ನಮ್ಮ ಮನಸ್ಸಿನ ಶಾಂತಿ ಮಂತ್ರ ಮುಖ್ಯವಾಗಿದೆ. ಎಲ್ಲಾ ಮಂತ್ರಗಳಿಗೆ ಪಿತಾಮಹ “ಓಂ ನಮಃ ಶಿವಾಯ" ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬಸವ ಟಿ.ವಿ ವಾಹಿನಿಯ ಸಂಸ್ಥಾಪಕರಾದ ಶ್ರೀ ಕೃಷ್ಣಪ್ಪನವರು ನಡೆಸಿಕೊಟ್ಟರು.





