
5 Oct 2024
ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ 2024ರಲ್ಲಿ ದಿನಾಂಕ:05.10.2024ರಂದು ಅನುಭವ ಮಂಟಪದಲ್ಲಿ ಸಾಮೂಹಿಕ
ಬೆಳಿಗ್ಗೆ 10.30 ಗಂಟೆಗೆ ಅನುಭವ ಮಂಟಪದಲ್ಲಿ 34ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿತು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆಯ ವಿರಕ್ತಮಠದ ಶ್ರೀ. ಬಸವಪ್ರಭು ಸ್ವಾಮಿಜಿ ಮಾತನಾಡಿ, ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಮಾತ್ರ ಒಂದೇ ಇರುತ್ತದೆ. ಅದೇ ರೀತಿ ಸತಿಪತಿಗಳ ದೇಹಗಳು ಎರಡರಲ್ಲು ಬದುಕಿನಲ್ಲಿ ಸುಖ ಇರಲಿ ದುಖಃವಿರಲಿ ಒಂದೇ ಮನಸ್ಸಿನಿಂದ ಸ್ವೀಕರಿಸುತ್ತಾ ಹಸನಾದ ಬದುಕನ್ನು ಕಟ್ಟಿಕೊಳ್ಳಿ ಎಂದು ನವ ವಧುವರರಿಗೆ ಶುಭ ಕೋರಿದರು.
ಮೈಸೂರು ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀ ಮಹಾದೇವಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಹಲವು ಮೌಡ್ಯಗಳನ್ನು ಕಳೆದು ಸಮಸಮಾಜ ನಿರ್ಮಾಣ ಮಾಡಿದ್ದರು. ಕಲ್ಯಾಣ ಮಹೋತ್ಸವದ ಉದ್ದೇಶವೇ ಸರಳವಾಗಿ ವಿವಾಹವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು. ಆಡಂಬರಕ್ಕಿಂತ ಆದರ್ಶ ಮುಖ್ಯ. ಎರಡು ಮನಸ್ಸು, ಎರಡು ಹೃದಯಗಳ ಸಮ್ಮಿಲನವೇ ಸಂಸಾರವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಶ್ರೀ.ಬಸವಕುಮಾರಸ್ವಾಮಿಗಳು, ಛಲವಾದಿ ಗುರುಪೀಠದ ಶ್ರೀ ಬಸವನಾಗಿ ದೇವ ಸ್ವಾಮಿಗಳು, ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ದ ಬಸವ ಕಬೀರ ಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೈಸೂರು ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀ ಮಹಾದೇವಪ್ಪ, ಭರಮಸಾಗರದ ಶ್ರೀ ಟಿ.ಆರ್.ಚನ್ನೇಶ್, ಶ್ರೀ ಎನ್.ಟಿ.ಬಸಣ್ಣ, ಹಾವೇರಿ ಬಸವಕೇಂದ್ರದ ಶ್ರೀಮತಿ ಶೋಭಾತಾಯಿ ಮಾಗಾವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾದ ಶ್ರೀ ಕೆ.ಜಿ.ಸಿದ್ದಲಿಂಗ ಪ್ರಸಾದ್ರವರನ್ನು ಸನ್ಮಾನಿಸಲಾಯಿತು.
ಕಲ್ಯಾಣ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.





