ಚಿತ್ರದುರ್ಗ, ಆ.26 : ಚಿತ್ರದುರ್ಗ ಶೂನ್ಯಪೀಠದ 24ನೆಯ ಅಧ್ಯಕ್ಷರು, ತ್ರಿವಿಧ ದಾಸೋಹ ತತ್ವದ ರೂವಾರಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ದಿ. 27.08,2024ಕ್ಕೆ ಜನ್ಮ ತಾಳಿ 150 ವರ್ಷಗಳು ಸಂದುತ್ತವೆ. ಪ್ರಯುಕ್ತ ಅವರ 150ನೇ ಜಯಂತ್ಯುತ್ಸವವನ್ನು ಶರಣ ಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಮೊನ್ನೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದೀಗ ದಿನಾಂಕ 27 -8 -2024ರ ಮಂಗಳವಾರ ಬೆಳಗ್ಗೆ 8.00 ಗಂಟೆಗೆ ಪರಮ ಪೂಜ್ಯ ಗುರುಗಳ ಜಯಂತಿ ಮಹೋತ್ಸವವನ್ನು ಚಿತ್ರದುರ್ಗದ ಮುರುಘಾಮಠದಲ್ಲಿ ಮುರಗಿ ಶಾಂತವೀರ ಮಹಾಸ್ವಾಮಿಗಳವರ ಕರ್ತೃಗದ್ದುಗೆಯ ಮುಂದೆ ಆಚರಿಸಲಾಗುವುದು ಎಂದು ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.
ಹಾಗೆಯೇ ಮಹಾಸ್ವಾಮಿಗಳವರ, ಬೃಹನ್ಮಠದ ಭಕ್ತರು, ಬೃಹನ್ಮಠದ ಶಾಖಾ ಖಾಸಾ ಮಠಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ, ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಎಲ್ಲ ಶಾಲಾ ಕಾಲೇಜುಗಳಲ್ಲಿ ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತಾದ ಬಗ್ಗೆ ಚಿಂತನ ನಡೆಸಲಾಗುತ್ತದೆ.